ನೆರೆ ಹಾವಳಿ ಪ್ರದೇಶಗಳ ಕುಟುಂಬಗಳಿಗೆ ಸುರಕ್ಷಿತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಶಾಸಕ ಕೆ.ಮಹದೇವ್ ಭರವಸೆ ನೀಡಿದರು.

ಪಟ್ಟಣದ ತಾಲೂಕು ಆಡಳಿತ ಭವನ ಕಚೇರಿ ಆವರಣದಲ್ಲಿ ನೆರೆ ಸಂತ್ರಸ್ತರಿಗೆ ಸರ್ಕಾರದ ತಾತ್ಕಾಲಿಕ ಪರಿಹಾರದ ಬಾಕಿ ಹಣದ ಚೆಕ್ ವಿತರಿಸಿ  ಅವರು ಮಾತನಾಡಿದರು, ನೆರೆ ಪ್ರವಾಹದಿಂದ ಮನೆ ಕಳೆದು ಸಂತ್ರಸ್ತರಾದ ಕುಟುಂಬಗಳಿಗೆ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿರುವುದು ಶ್ಲಾಘನೀಯ, ಇದರಿಂದ ಸಂತ್ರಸ್ತರು ಪುನರ್ವಸತಿ ಕಲ್ಪಿಸಿಕೊಳ್ಳಲು ಸಹಾಯವಾಗಲಿದೆ, ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ಮಾಡಿದ್ದ ಮನವಿಗೆ ಸ್ಪಂದಿಸಿರುವ ಸರ್ಕಾರ ತಾಲೂಕನ್ನು ನೆರೆಪೀಡಿತ ಪ್ರದೇಶ ಎಂದು ಘೋಷಿಸಿರುವುದರಿಂದ ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಿಸಲು ಸಹಕಾರಿಯಾಗಲಿದ್ದು ಅಧಿಕಾರಿಗಳು ವಿಳಂಬ ಧೋರಣೆ ಹಾಗೂ ತಾರತಮ್ಯ ಮಾಡದೆ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದರು, ರಾಜಕಾರಣದಲ್ಲಿ ಬದ್ಧತೆ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಅಭಿನಂದನೆ ತಿಳಿಸಿದರು.  

     ಸಂಸದ ಪ್ರತಾಪ್ ಸಿಂಹ ಮಾತನಾಡಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಜವಾಬ್ದಾರಿ ನಮ್ಮಗಳ ಮೇಲಿದ್ದು ಪ್ರಾಮಾಣಿಕವಾಗಿ ಸಂತ್ರಸ್ತರ ನೆರವಿಗೆ ನಿಲ್ಲೋಣ, ರೈತರು ದೀನದಲಿತರ ಪರಿಹಾರ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸದೇ ಯಾವುದೇ ಸೋರಿಕೆಗೆ ಅವಕಾಶ ನೀಡದೆ ಪ್ರಾಮಾಣಿಕವಾಗಿ ಸರ್ಕಾರದ ಸವಲತ್ತುಗಳನ್ನು ಸಂತ್ರಸ್ತರಿಗೆ ತಲುಪಿಸೋಣ ಎಂದರು, ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಿ ಪಕ್ಷ ಭೇದ ಮಾಡದೆ ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.

     ಮಾಜಿ ಶಾಸಕ ಎಚ್.ಸಿ ಬಸವರಾಜ್ ಮಾತನಾಡಿ ತಾಲೂಕಿನ ಗಡಿಭಾಗದ ಕಾವೇರಿ ತೀರದ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಸರ್ಕಾರದಿಂದ ಸಿಗುವ ಬೆಳೆ ಪರಿಹಾರ ಧನ ಪ್ರಸ್ತುತ ಕಡಿಮೆ ಇದ್ದು ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಸದರು, ಶಾಸಕರ ಒಟ್ಟುಗೂಡಿ ಮನವಿ ಸಲ್ಲಿಸಲಾಗುವುದು ಎಂದರು.   ಪಿರಿಯಾಪಟ್ಟಣ: ತಾಲೂಕಿನ ವಿವಿಧೆಡೆಯ ಹಾಡಿಗಳಲ್ಲಿನ ನಿವಾಸಿಗಳ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆಗೆ ಸಂಸದರಾದ ಪ್ರತಾಪ್ ಸಿಂಹ ಅವರು ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ದೊರಕಿಸಿ ಕೊಡುವಂತೆ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಕೋರಿದರು.

     ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನ 38 ಹಾಡಿಗಳಲ್ಲಿ 2000 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ದುಸ್ತರವಾಗಿದೆ, 30 ವರ್ಷಗಳ ಹಿಂದೆ ಭೂಸೇನಾ ನಿಗಮದಿಂದ ಮನೆಗಳ ನಿರ್ಮಾಣವಾಗಿದ್ದು ಶಿಥಿಲಾವಸ್ಥೆ ತಲುಪಿವೆ, ಮನೆಗಳ ಹೊದಿಕೆಯಾಗಿ ವಿತರಿಸುತ್ತಿದ್ದ 400 ಟಾರ್ಪಲ್ ಗಳ ವೆಚ್ಚ 7 ರಿಂದ 8 ಲಕ್ಷ ಖರ್ಚಾಗುತ್ತಿದ್ದು ಹಣಕಾಸು ಮಂಜೂರಾತಿಯಲ್ಲಿ ವಿಳಂಬವಾಗುತ್ತಿದೆ, ಇದನ್ನು ಸಂಸದರು ಮನಗಂಡು ಹಾಡಿಗಳ ನಿವಾಸಿಗಳ ಮೂಲಭೂತ ಸೌಕರ್ಯ ಕೊರತೆ ನಿವಾರಣೆಗೆ ಕೇಂದ್ರ ಸರ್ಕಾರದ ಮುಖಾಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದರು.

    ತಾಲೂಕಿನಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಗಾರ್ಮೆಂಟ್, ಟೆಕ್ಸ್ ಟೈಲ್ ಗಳ ನಿರ್ಮಾಣಕ್ಕೆ ಗಮನಹರಿಸಿ ಹಾಡಿಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುವಂತೆ ಕೋರಿದರು.    

    ಶ್ಲಾಘನೆ:  ತಹಸೀಲ್ದಾರ್ ಅವರ ಮನವಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ ತಾಲೂಕಿನ ನೆರೆ ಹಾವಳಿ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರು ಅಧಿಕಾರಿಗಳೊಟ್ಟಿಗೆ ಶ್ರಮಿಸಿ ಪರಿಹಾರ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ, ಮಹಿಳಾ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಅವರು ಕರ್ತವ್ಯ ನಿರ್ವಹಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ, ಪಕ್ಕದ ಕೊಡಗಿನಲ್ಲಿಯೂ ಸಹ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂವರು ಸಹ ಮಹಿಳೆಯರೇ ಆಗಿದ್ದು ನೆರೆ ಪ್ರವಾಹ ಸಂದರ್ಭ ಸಂತ್ರಸ್ತರ ಪರಿಹಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು, ಅವರ ಸೇವೆ ಶ್ಲಾಘನೀಯ ಎಂದರು. ಸಂಸದರ ಮಾತಿಗೆ ದನಿಗೂಡಿಸಿದ ಶಾಸಕ ಕೆ.ಮಹದೇವ್ ಅವರು ಸಹ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರ ನೇತೃತ್ವದ ತಾಲೂಕು ಅಧಿಕಾರಿಗಳ ಕಾರ್ಯಕ್ಕೆ ಅಭಿನಂದನೆ ತಿಳಿಸಿದರು.   

Leave a Comment

Your email address will not be published. Required fields are marked *

error: Content is protected !!
Scroll to Top