ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಬುಧವಾರದಿಂದ ಆರಂಭವಾದ ಮೂರು ದಿನಗಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.

   ಈ ಸಂದರ್ಭ ಮಾತನಾಡಿದ ಶಾಸಕರು ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿರುವ ಕ್ರೀಡಾಪಟುಗಳು ತಾಲೂಕು ಹಂತದಲ್ಲಿ ಭಾಗವಹಿಸಲು ಆಗಮಿಸಿದ್ದು ಇಲ್ಲಿ ಬಂದಿರುವ ಎಲ್ಲಾ ಕ್ರೀಡಾಪಟುಗಳು ವಿಜೇತರೇ ಆಗಿರುವುದರಿಂದ ಮುಂದಿನ ಹಂತಕ್ಕೆ ತೀವ್ರ ಪೈಪೋಟಿ ಇರುತ್ತದೆ,

 ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿ.ವಿ ಸಿಂಧು ಅವರು ಜಯಗಳಿಸಿ ಭಾರತದ ಹೆಮ್ಮೆ ಹೆಚ್ಚು ಮಾಡಿದ್ದಾರೆ ಎಂದರು. 

   ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪರಾಜೇಶ್ ಮಾತನಾಡಿ ಇತ್ತೀಚಿನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರು ಸಹ ಪುರುಷರಿಗೆ ಸರಿಸಮನಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಪ್ರತಿಯೊಬ್ಬರೂ ದೃಢ ಗುರಿಯೊಂದಿಗೆ ಈ ಗೆಲುವು ಸಾಧಿಸಲು ಪಣ ತೊಡಬೇಕಿದೆ ಎಂದರು. 

    ಬಿಇಒ ಚಿಕ್ಕಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಘುಪತಿ ಮಾತನಾಡಿದರು. 

   ಪಥಸಂಚಲನ ಕಾರ್ಯಕ್ರಮದ ಪ್ರೌಢಶಾಲಾ ವಿಭಾಗದಲ್ಲಿ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಥಮ, ಎಸ್ಎಂಎಸ್ ವಿದ್ಯಾಸಂಸ್ಥೆ ಬೆಟ್ಟದಪುರ ದ್ವಿತೀಯ, ಎಸ್.ಟಿ ಮುರಾರ್ಜಿ ಶಾಲೆ ಕಗ್ಗುಂಡಿ ತೃತೀಯ ಸ್ಥಾನ ಪಡೆದವು,  

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜೆಕೆಟಿ ಶಾಲೆ ಹೊನ್ನಾಪುರ ಪ್ರಥಮ, ಅತ್ತಿಗೋಡು ಶಾಲೆ ದ್ವಿತೀಯ, ಮಾಕೋಡು ಶಾಲೆ ತೃತೀಯ ಸ್ಥಾನ ಪಡೆದವು.

    ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ಪುರಸಭಾ ಸದಸ್ಯರಾದ ಪ್ರಕಾಶ್ ಸಿಂಗ್, ನಿರಂಜನ್, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಪ್ರೌಢಶಾಲಾ ದೈಹಿಕ ಶಿಕ್ಷಕರುಗಳ ಸಂಘದ ಅಧ್ಯಕ್ಷ ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ವಿವಿಧ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರುಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top