ರೈತರು ಕೃಷಿ ಇಲಾಖೆಯಿಂದ ಸೂಕ್ತ ಮಾಹಿತಿಗಳನ್ನು ಪಡೆದು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಕಾಣಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು.

    ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಅರ್ಹ ಫಲಾನುಭವಿ ರೈತರಿಗೆ ವಿವಿಧ ಯೋಜನೆಯಡಿ  ಕೃಷಿ ಯಂತ್ರೋಪಕರಣ ಹಾಗೂ ಬಿತ್ತನೆ ಬೀಜಗಳನ್ನು  ವಿತರಿಸಿ ಅವರು ಮಾತನಾಡಿದರು, ರೈತರು ಕೃಷಿ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಿದಾಗ  ಅಭಿವೃದ್ದಿ ಹೊಂದಲು ಸಾಧ್ಯ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳು ತಮ್ಮ ಸೌಲಭ್ಯನ್ನು ಮಾರಾಟ ಮಾಡದೆ ಕ‍್ರಷಿ ಚಟುವಟಿಕೆಗಳಲ್ಲಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು, ಇತ್ತಿಚೆಗೆ ಫಲಾನುಭವಿಗಳು ತಮ್ಮ ಸೌಲಭ್ಯಗಳನ್ನು ಇತತರರಿಗೆ ಮಾರಾಟ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ ಇದಕ್ಕೆ ರೈತರು ಕಡಿವಾಣ ಹಾಕಿ ಕೃಷಿ ಇಲಾಖೆ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. 

   ತಾಲೂಕು ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ ಈ ಬಾರಿಯ ನೆರೆ ಹಾವಳಿಯಿಂದ ತಾಲೂಕಿನಲ್ಲಿ 682 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿದ್ದು ಈಗಾಗಲೇ ಹಾನಿಗೊಳಗಾದ ಪ್ರದೇಶದ ರೈತರಿಗೆ ಪರಿಹಾರ ನೀಡುವ ಕಾರ್ಯ ಸಾಗಿದೆ, 2018-19ನೇ ಸಾಲಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ 31 ರೈತ ಕುಟುಂಬಗಳಿಗೆ ಮತ್ತು  2019-20 ನೇ ಸಾಲಿನಲ್ಲಿ 4 ರೈತ ಕುಟುಂಬಗಳಿಗೆ  ಪರಿಹಾರ ನೀಡಲಾಗಿದೆ,  ಆಕಸ್ಮಿಕ ರೈತ ಸಾವು ಪ್ರಕರಣದಡಿಯಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದು ತಲಾ ರೂ.2 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ, ರೈತರನ್ನು ಕೃಷಿಯಲ್ಲಿ ಉತ್ತೇಜಿಸಲು ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ, ಮಣ್ಣು ಪರೀಕ್ಷೆ ಅಭಿಯಾನ,  ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಸಂಸ್ಕರಣ ಯೋಜನೆ, ಸಸ್ಯ ಸಂರಕ್ಷಣೆ ಯೋಜನೆ, ಸಾವಯವ ಕೃಷಿ ಯೋಜನೆ ಕುರಿತಂತೆ ಹಲವು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಇವುಗಳನ್ನು ಸದ್ಬಳಕೆ  ಮಾಡಿಕೊಳ್ಳಬೇಕು ಎಂದರು.   ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ ರಾಜೇಶ್, ಸದಸ್ಯ ಎಸ್.ರಾಮು ಮಾತನಾಡಿದರು.     ಈ ಸಂದರ್ಭ ಜಿ.ಪಂ ಸದಸ್ಯ ಜಯಕುಮಾರ್, ತಾ.ಪಂ ಸದಸ್ಯರಾದ ರಂಗಸ್ವಾಮಿ, ಶ್ರೀನಿವಾಸ್, ಮೋಹನ್ ರಾಜ್, ಕೃಷಿ ಅಧಿಕಾರಿ ದಿವಾಕರ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top