ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಒಬ್ಬ ಉತ್ತಮ ವಿದ್ಯಾರ್ಥಿಯನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ, ಶಿಕ್ಷಣ ಕ್ಷೇತ್ರಕ್ಕೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಮಹತ್ವದ್ದಾಗಿದ್ದು ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನ ಎಂದು ಆಚರಿಸುತ್ತಾ ಬಂದಿರುವುದು ಸಂತಸಕರ, ಇಂದಿನ ಶಿಕ್ಷಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬದುಕು ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮವಾಗಿ ಪಕ್ಷಾತೀತ ಮತ್ತು ರಾಜಕೀಯ ರಹಿತ ಸೇವೆ ನೀಡಬೇಕಿದೆ ಎಂದರು.

       ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕರಾದ

 ಪ್ರೊ.ನೇತ್ರಾವತಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ ಸಮಾಜಕ್ಕೆ ಪ್ರತಿಭಾನ್ವಿತರನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅಪಾರ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಸಾಧಕರ ಬೆನ್ನೆಲುಬು ಸಹ ಶಿಕ್ಷಕರು, ಗುರು ಎಂಬ ಪದದಲ್ಲಿ ಗುರುತ್ವ ಸಹ ಇದ್ದು ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸದತ್ತ ಸೆಳೆಯುವ ಶಕ್ತಿ ಶಿಕ್ಷಕರಲ್ಲಿದೆ, ರೈತ ಮತ್ತು ಶಿಕ್ಷಕರು ಸಮಾಜದ ಆಧಾರ ಸ್ತಂಭಗಳು, ಶಿಕ್ಷಣ ಕ್ಷೇತ್ರದಲ್ಲಿ ಭಾರತವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಕೀರ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರದು ಎಂದರು.

    ಬಿಇಒ ಚಿಕ್ಕಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಗಣ್ಯರಿಗೆ ಸ್ವಾಗತ ಕೋರಿದರು, ಕಾರ್ಯಕ್ರಮದಲ್ಲಿ ತಾಲೂಕಿನ ಅತ್ಯುತ್ತಮ ಶಾಲೆಗಳು, ಉತ್ತಮ ಶಿಕ್ಷಕರು ನಿವೃತ್ತಿ ಮತ್ತು ವರ್ಗಾವಣೆ ಹೊಂದಿದ ಶಿಕ್ಷಕರು, ಸರ್ಕಾರಿ ಶಾಲೆಗಳಿಗೆ ಭೂದಾನ ಮಾಡಿದ ದಾನಿಗಳು, ಸರ್ಕಾರಿ ಶಾಲೆಗಳನ್ನು ದತ್ತು ಪಡೆದವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು, ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಶಿಕ್ಷಕರಿಗೆ  ಬಹುಮಾನ ವಿತರಿಸಲಾಯಿತು, ಶಿಕ್ಷಕ-ಶಿಕ್ಷಕಿಯರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಪ್ರೇಕ್ಷಕರನ್ನು ರಂಜಿಸಿತು.   

    ಈ ಸಂದರ್ಭ ಜಿ.ಪಂ ಸದಸ್ಯರಾದ ಪಿ.ರಾಜೇಂದ್ರ,  ಕೆ.ಎಸ್ ಮಂಜುನಾಥ್, ಮಣಿ ಡಿ.ಟಿ ಸ್ವಾಮಿ, ಕೌಸಲ್ಯ ಲೋಕೇಶ್, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪಾ ರಾಜೇಶ್, ಸದಸ್ಯರಾದ ಟಿ.ಈರಯ್ಯ, ರಂಗಸ್ವಾಮಿ, ಸುಮಿತ್ರಾ ನಾಗರಾಜ್, ಪಂಕಜ ರವಿ, ಮಲ್ಲಿಕಾರ್ಜುನ್, ಕ್ಷೇತ್ರ ಸಮನ್ವಯಾಧಿಕಾರಿ ಹೇಮಂತರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎಸ್ ರಘುಪತಿ, ಪುರಸಭಾ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.       

Leave a Comment

Your email address will not be published. Required fields are marked *

error: Content is protected !!
Scroll to Top