ಅಧಿಕಾರಿಗಳ ನಿರ್ಲಕ್ಷತನದಿಂದ ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಳ್ಳದೆ ಸಾರ್ವಜನಿಕರು ನನ್ನನು ದೂರುವಂತ್ತಾಗಿದೆ ಎಂದು ಶಾಸಕ ಕೆ.ಮಹದೇವ್ ಅಧಿಕಾರಿಗಳ ವಿರುದ್ದ ಹರಿಹಾಯ್ದರು. 12/02/2021

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವರದಿಯ ಸಭೆಯಲ್ಲಿ ಭಾಗಹಿಸಿ ಮಾತನಾಡಿದರು.
ಅಧಿಕಾರಿಗಳು ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಆಗ ಮಾತ್ರ ಅಭಿವೃದ್ದಿ ಕರ‍್ಯಗಳು ಯಶಸ್ಸನ್ನು ಕಾಣಲು ಸಾಧ್ಯ.ತಾಲ್ಲೂಕಿನ ಅಭಿವೃದ್ದಿಗಾಗಿ ನಾನು ಹಗಲಿರುಳು ಶ್ರಮಿಸುತ್ತಿದೇನೆ. ಆದರೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಛೇರಿಗೆ ಆಗಮಿಸಿ ತೆರಳುತ್ತಿದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳ ನಿರ್ಲಕ್ಷತನದಿಂದ ಅನುದಾನ ಬಿಡುಗಡೆಯಾಗಿ ಗುದ್ದಲಿ ಪೂಜೆ ನೆರವೇರಿಸಿರುವ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಇದರಿಂದಾಗಿ ಸಾರ್ವಜನಿಕರು ನನ್ನನು ದೂರುತ್ತಿದ್ದಾರೆ ಇದಕ್ಕೆ ಯಾರು ಉತ್ತರ ನೀಡಬೇಕು ಮತ್ತು ಮಂಜುರಾಗಿರುವ ಫಲಾನುಭವಿಗಳಿಗೆ ಮನೆಗಳ ಜಿಪಿಎಸ್ ಮಾಡಿಸದೆ ಮನೆ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ ಇದನು ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು.ಅತೀ ಶೀಘ್ರದಲ್ಲಿ ೧೫೦ ಕೆರೆಗಳಿಗೆ ನೀರು ಹರಿಸುವ ಮುತ್ತಿನ ಮುಳುಸೋಗೆ ಯೋಜನೆಯೂ ಪೂರ್ಣಗೊಳ್ಳಬೇಕು ಹಾಗೂ ಕಡ್ಡಾಯವಾಗಿ ಶಾಸಕರ ಸಭೆಗಳಿಗೆ ಆಗಮಿಸಿ ತಾಲ್ಲೂಕಿನ ಅಭಿವೃದ್ದಿಯ ಬಗ್ಗೆ ಯೋಜನೆಗಳನ್ನು ರೂಪಿಸಲು ಅಧಿಕಾರಿ ವರ್ಗವು ಸಹಕರಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ನಿರ್ಮಿತಿ ಕೇಂದ್ರ ಎಇಇ ರಕ್ಷಿತ್ ಮಾತನಾಡಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಸಮುದಾಯಗಳ ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ತಲಾ ೫೦ ಲಕ್ಷ ರೂಗಳನ್ನು ನೀಡಿದ್ದು ಅತೀ ಶೀಘ್ರದಲ್ಲಿ ಕೆಲಸ ಪ್ರಾರಂಭಿಸಲಾಗುವುದು.ವಿವಿದ ಭಾಗಗಳಲ್ಲಿ ಆಶ್ರಮ ಶಾಲೆಗಳ ದುರಸ್ಥಿಗೆ ಅನುದಾನ ಕೋರಿದ್ದ ಕಾರಣ ಅನುದಾನ ಮಂಜುರು ಮಾಡಲಾಗಿದೆ.ಅಲ್ಲದೆ ಬೆಟ್ಟದಪುರ ಮತ್ತು ಪಿರಿಯಾ ಪಟ್ಟಣದಲ್ಲಿ ಐಟಿಐ ಕಾಲೇಜುಗಳ ಹೆಚ್ಚುವರಿ ಕಟ್ಟಡ ನಿರ್ಮಿಸಲು ಕೂಡ ೧.೫೦ ಕೋಟಿ ಅನುದಾನ ಬಿಡುಗಡೆಯಾಗಿದೆ.ಇದರ ಜೊತೆಗೆ ಬೆಟ್ಟದಪುರ ಮತ್ತು ರಾವಂದೂರಿನಲ್ಲಿ ನಾಡ ಕಛೇರಿಯ ಕಟ್ಟಡಗಳ ನಿರ್ಮಾಣದ ಕರ‍್ಯ ಪ್ರಾರಂಭವಾಗಿದೆ ಮತ್ತು ಬುಡಕಟ್ಟು ಸಮುದಾಯಕ್ಕಾಗಿ ೧೦ ಮನೆಗಳು ಮಂಜುರಾಗಿದ್ದು ಫಲಾನುಭವಿಗಳೆ ನಿರ್ಮಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ರತ್ತನ್ ಕುಮಾರ್ ಮಾತನಾಡಿ ರೈತರಿಗೆ ಕೃಷಿ ಪ್ರೋತ್ಸಾಹ ಯೋಜನೆಯಲ್ಲಿ ಈ ಬಾರಿಯಿಂದ ಗಿಡಗಳನ್ನು ಬೆಳೆಸಲು ಪ್ರತಿ ಗಿಡಕ್ಕೆ ೧೨೦ರೂ ಪ್ರೋತ್ಸಾಹ ಧನ ನೀಡಲಾಗುವುದು.ಶ್ರೀಗಂಧ ಗಿಡಗಳಿಗೆ ಬೇಡಿಕೆ ಹೆಚ್ಚಾಗಿದ್ದು ಈಗಾಗಲೆ ವಿವಿಧ ರೀತಿಯ ೨,೩೦,೦೦೦ ಗಿಡಗಳನ್ನು ಇಲಾಖೆ ವತಿಯಿಂದ ಬೆಳೆಸಲಾಗಿದೆ ಎಂದರು.


ಶಾಸಕರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ರಸ್ತೆ ಸೇರಿದಂತ್ತೆ ಇತರೆ ಯೋಜನೆಗಳನ್ನು ಮಾಡಲು ಅರಣ್ಯ ಇಲಾಖೆಯು ತಮಗೆ ಸೇರಿದ ಜಾಗವೆಂದು ಹೇಳಿ ಯೋಜನೆಗಳನ್ನು ತಡೆಯಿಡುವ ಕರ‍್ಯಗಳನ್ನು ಮಾಡಬಾರದು.ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವಿರುವುದು.ಇಲಾಖೆಯ ಮೇಲಾಧಿಕಾರಿಗಳ ಜೊತೆ ಮಾತನಾಡುವ ಅನಿವರ‍್ಯವಿದ್ದರೆ ನನಗೆ ತಿಳಿಸಿ ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ಸಿದ್ದೇಗೌಡ ಮಾತನಾಡಿ ಕೊವೀಡ್‌ನಿಂದ ಸ್ಥಗಿತಗೊಂಡಿದ್ದ ವಿದ್ಯಾರ್ಥಿನಿಲಯಗಳು ಪ್ರಾರಂಭವಾಗಿದ್ದು ಇವುಗಳ ನಿರ್ವಹಣೆ ಜೊತೆಗೆ ಹಾಡಿಗಳಲ್ಲಿನ ೨,೧೪೭ ಕುಟುಂಬಗಳಿಗೆ ಸರ್ಕಾರದಿಂದ ನೀಡುವ ಆಹಾರ ಪದಾರ್ಥಗಳನ್ನು ವಿತರಿಸಲಾಗುತಿದೆ ಎಂದರು.
ಈ ಪದಾರ್ಥಗಳನ್ನು ವಿತರಿಸುವ ಸಂದರ್ಭದಲ್ಲಿ ಫಲಾನುಭವಿಗಳಿಗೆ ಅನುಕೂಲವಾಗುವ ಸ್ಥಳಗಳನ್ನು ನಿಗದಿಪಡಿಸಿ ವಿತರಿಸಿ.ಬಹಳ ದೂರದಿಂದ ಆಗಮಿಸುವ ಫಲಾನುಭವಿಗಳು ಆಹಾರ ಪದಾರ್ಥಗಳನ್ನು ಸಾಗಿಸಲು ಪರಿತಪಿಸುವ ವ್ಯವಸ್ಥೆ ತಪ್ಪುತ್ತದೆ ಎಂದು ಶಾಸಕರು ತಿಳಿಸಿದರು.
ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ಮಾತನಾಡಿ ಕೊವೀಡ್‌ನಿಂದ ಸ್ಥಗಿತವಾಗಿದ್ದ ಬಸ್ಸ್ ಗಳನ್ನು ಚಾಲನೆ ಮಾಡಲಾಗಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ನೂತನ ಬಸ್ಸ್ ಪಾಸ್ ಆಗುವ ತನಕ ಹಳೆಯ ಪಾಸ್ ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.ನೂತನ ಬಸ್ಸ್ ಪಾಸ್ ಮಾಡಿಸಲು ಫೇಬ್ರವರಿ ತಿಂಗಳ ಕೊನೆ ತನಕ ಸಮಯವನ್ನು ನೀಡಲಾಗಿದೆ ಎಂದು ತಿಳಿಸಿದರು ಮತ್ತು ಕೆಪಿಟಿಸಿಎಲ್‌ನ ಮೇಜರ್ ವರ್ಕ್ಸ್ನ ಅಭಿಯಂತರ ಮಾದೇವ ಮಾತನಾಡಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಂಜುರಾಗಿರುವ ವಿದ್ಯುತ್ ಉಪ ಶಾಖೆಗಳನ್ನು ಸ್ಥಾಪಿಸಲು ಸ್ಥಳವನ್ನು ಗುರುತಿಸಿಕೊಡಬೇಕಾಗಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್,ತಾ ಪಂ ಅಧ್ಯಕ್ಷೆ ನಿರೂಪ ರಾಜೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ,ಕಾರ್ಯ ನಿರ್ವಾಹಕಾಧಿಕಾರಿ ಡಿ.ಸಿ.ಶೃತಿ,ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ,ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್,ಎಇಇ ನಾಗರಾಜು,ಪ್ರಭು,ದಿನೇಶ್,ಲೋಹಿತ್,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೋಹನ್ ರಾಜ್,ಭೂಮಾಪನ ಇಲಾಖೆಯ ಪ್ರಕಾಶ್,ರಘುನಾಥ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕುಮಾರ್,ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್,ಡಾ.ಶರತ್ ಸೇರಿದಂತ್ತೆ ಇತರರು ಹಾಜರಿದ್ದರು.

1 thought on “ಅಧಿಕಾರಿಗಳ ನಿರ್ಲಕ್ಷತನದಿಂದ ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಳ್ಳದೆ ಸಾರ್ವಜನಿಕರು ನನ್ನನು ದೂರುವಂತ್ತಾಗಿದೆ ಎಂದು ಶಾಸಕ ಕೆ.ಮಹದೇವ್ ಅಧಿಕಾರಿಗಳ ವಿರುದ್ದ ಹರಿಹಾಯ್ದರು. 12/02/2021”

Leave a Comment

Your email address will not be published. Required fields are marked *

error: Content is protected !!
Scroll to Top