
ಪಿರಿಯಾಪಟ್ಟಣ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಗೋಣಿಕೊಪ್ಪ ರಸ್ತೆಯ ಜಿಜೆಸಿಪಿ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.
ಶಾಸಕ ಕೆ.ಮಹದೇವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಕೀಯ ಆಡಳಿತದ ಕಪಿಮುಷ್ಟಿಯಲ್ಲಿದ್ದ ನಮ್ಮ ದೇಶವನ್ನು ಪಾರು ಮಾಡಲು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅನೇಕ ಮಹನೀಯರ ಸಂಘಟಿತ ಹೋರಾಟ ಭಾರತೀಯರಿಗೆ ಸ್ವಾತಂತ್ರ್ಯ ಸಿಗಲು ಕಾರಣವಾಯಿತು, ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ದೇಶದ ಗಡಿಯಲ್ಲಿ ನಮ್ಮನ್ನೆಲ್ಲರನ್ನು ಕಾಯುತ್ತಿರುವ ಯೋಧರನ್ನು ಸಹ ನಾವು ಗೌರವಿಸಬೇಕು, ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದರೂ ಸಹ ಗಾಂಧೀಜಿಯವರ ಕನಸು ನನಸಾಗಿಲ್ಲ ಇದಕ್ಕೆ ಪ್ರಮುಖ ಕಾರಣ ರಾಜಕಾರಣಿಗಳೊ ಅಥವಾ ಅಧಿಕಾರಿಗಳ ಆಡಳಿತ ವೈಫಲ್ಯವೊ ತಿಳಿಯದು, ರಾಜಕಾರಣಿಗಳನ್ನು ಹೊರತುಪಡಿಸಿ ಅಧಿಕಾರಿಗಳು ಮನಸ್ಸು ಮಾಡಿದರೆ ಗಾಂಧೀಜಿಯವರ ಕಂಡ ಕನಸು ನನಸಾಗುತ್ತದೆ, ಗ್ರಾಮಾಂತರ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ, ಭಾರತ ಸಂಪದ್ಭರಿತ ದೇಶವಾಗಿದ್ದು ಇಲ್ಲಿನ ಜನರು ದಾನದಲ್ಲಿ ಉದಾರ ಮನೋಭಾವ ಹೊಂದಿದ್ದಾರೆ, ಯುವ ಪೀಳಿಗೆ ದೇಶದ ಬಗ್ಗೆ ಕಾಳಜಿ ಹೊಂದಿ ಮಹನೀಯರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಭಾಷಣ ಮಾಡಿದ ರಾಜ್ಯಪ್ರಶಸ್ತಿ ವಿಜೇತರು ಹಾಗು ನಿವೃತ್ತ ಪ್ರಾಂಶುಪಾಲರಾದ ಮೈಸೂರಿನ ಡಾ.ಹೊನ್ನಯ್ಯ ಅವರು ಮಾತನಾಡಿ ನಮ್ಮ ದೇಶದಲ್ಲಿ ಸಂಪದ್ಭರಿತ ಅಂಶ ಹೆಚ್ಚಿರುವುದನ್ನು ಗಮನಿಸಿ ವ್ಯಾಪಾರಕ್ಕೆಂದು ಬಂದ ಪರಕೀಯರು ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸ್ಥಳೀಯ ಸಂಸ್ಥಾನಗಳ ಒಗ್ಗಟ್ಟಿನ ಕೊರತೆ ಲಾಭ ಪಡೆದು ಅವರ ಕಪಿಮುಷ್ಠಿಯಲ್ಲಿ ದೇಶದ ಜನತೆಯನ್ನು ಹಿಡಿದಿಟ್ಟಿದ್ದರು, ದೇಶ ಸ್ವಾತಂತ್ರ್ಯ ಪಡೆಯಲು ತೀವ್ರಗಾಮಿ ಹಾಗೂ ಮಂದಗಾಮಿ ಎಂದು ಎರಡು ಗುಂಪುಗಳಾಗಿ ಹೋರಾಟ ನಡೆಸಿದಾಗ ಕೊನೆಗೆ ಜಯ ಸಿಕ್ಕಿದ್ದು ಅಹಿಂಸಾ ಮಾರ್ಗಕ್ಕೆ, ಬಹುತೇಕ ಭಾರತೀಯರಿಗೆ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಅರಿವಿಲ್ಲ, ಪ್ರತಿಯೊಬ್ಬರು ದೇಶಪ್ರೇಮ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೂ ಸ್ವಾತಂತ್ರ್ಯದ ಅರಿವು ಮೂಡಿಸಬೇಕಿದೆ ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೀರ್ಘಕಾಲದ ಹೋರಾಟದಿಂದ ಗಳಿಸಿದ ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬಾಹ್ಯ ಶಕ್ತಿಗಳಿಂದ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಭಾರತೀಯರ ಮೇಲಿದೆ, ಸೈನಿಕರು ರೈತರು ಹಾಗೂ ರಕ್ಷಣಾ ಸಿಬ್ಬಂದಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡು ದೇಶದ ಏಕತೆ ಹಾಗೂ ಸಮಗ್ರತೆ ಕಾಪಾಡಬೇಕಿದೆ, ಕೊರೊನಾ ಸೋಂಕು ಹೋಗಲಾಡಿಸಲು ವೈದ್ಯರು ಮತ್ತು ಸ್ವಚ್ಚತಾ ಸಿಬ್ಬಂದಿ ಜೊತೆಗೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದು ಪ್ರತಿಯೊಬ್ಬರು ಸರ್ಕಾರದ ಸೂಚನೆಗಳನ್ನು ಕಡ್ಡಾಯ ಪಾಲಿಸಬೇಕು ಎಂದರು.
ಆರಕ್ಷಕ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಪಥಸಂಚಲನ ನಡೆಯಿತು, ಕೊರೊನಾ ವಾರಿಯರ್ಸ್ ಗಳಾದ ಪುರಸಭೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರಕ್ಷಕ, ಶಿಕ್ಷಣ ಮತ್ತು ಕಂದಾಯ ಇಲಾಖೆಯ 40 ಮಂದಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳು, ನರೇಗಾ ಯೋಜನೆಯಡಿ ಉತ್ತಮ ಸಾಧನೆ ತೋರಿರುವ ತಾಲ್ಲೂಕಿನ 17 ಗ್ರಾ.ಪಂ ಅಧ್ಯಕ್ಷರು, ಪಿಡಿಒ, ಹಾಗೂ ಡಾಟಾ ಆಪರೇಟರ್ ಗಳನ್ನು ಅಭಿನಂದಿಸಲಾಯಿತು, ಶಿಕ್ಷಣ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಡೆಸಿಕೊಟ್ಟ ದೇಶಪ್ರೇಮ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಒ ವೈ.ಕೆ ತಿಮ್ಮೆಗೌಡ, ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ವೃತ್ತ ನಿರೀಕ್ಷಕರಾದ ಜಗದೀಶ್ ಹಾಗೂ ಪ್ರಕಾಶ್, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್ ಸದಸ್ಯರಾದ ಪಿ.ಸಿ ಕೃಷ್ಣ, ಮಂಜುನಾಥ್, ಶ್ವೇತಾ, ಭಾರತಿ, ನೂರ್ ಜಹಾನ್, ರೇವತಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ, ಎಪಿಎಂಸಿ ಅಧ್ಯಕ್ಷ ಶಂಕರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮೋಹನ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪ್ಪರೆಡ್ಡಿ, ಶಿರಸ್ತೇದಾರ್ ಗಳಾದ ನಂದಕುಮಾರ್, ಟ್ರಿಜಾ, ಉಪತಹಸೀಲ್ದಾರ್ ಶುಭ, ವಿವಿಧ ಇಲಾಖೆ ಮುಖ್ಯಾಧಿಕಾರಿಗಳಾದ ಚಿಕ್ಕಣ್ಣ, ಡಾ.ಶರತ್ ಬಾಬು, ಕುಮಾರ್, ಜಯಂತ್, ಮಂಜುನಾಥ್, ಶಿವಕುಮಾರ್, ಪ್ರಸಾದ್, ಭಾರತಿ, ರತನ್ ಕುಮಾರ್, ವಿನೋದ್ ಗೌಡ, ಸಿದ್ದೇಗೌಡ, ಡಾ.ಸೋಮಯ್ಯ, ರಘುನಾಥ್, ಜಿ.ಸಿ ಮಹದೇವ್, ಎಂ.ಕೆ ಪ್ರಕಾಶ್, ಭಾರತಿ, ಅನಿಲ್, ಕುಮಾರ್, ಪ್ರಸಾದ್, ರಘು, ರಾಕೇಶ್, ಜೈಕುಮಾರ್ ಮತ್ತು ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತಿತರರಿದ್ದರು.























































































