ತಾಲ್ಲೂಕಿನ ವಿವಿಧೆಡೆಯ ಗ್ರಾ.ಪಂ ಗಳಲ್ಲಿ ನರೇಗಾ ಯೋಜನೆಯಡಿ 1.72 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಪ್ರತಾಪಸಿಂಹ ಹಾಗು ಶಾಸಕ ಕೆ.ಮಹದೇವ್ ರವರು ಚಾಲನೆ ನೀಡಿದರು
ಎಚ್.ಬೋರೆಕೊಪ್ಪಲು, ಹೆಚ್.ಮಠದ ಕೊಪ್ಪಲು, ಕಿತ್ತೂರು, ಮೇಲೂರು, ಕಗ್ಗಲಿಕೊಪ್ಪಲು, ಅತ್ತಿಗೋಡು, ಹರದೂರು ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರು ಹಾಗೂ ಶಾಸಕರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸದರು ಗ್ರಾ.ಪಂ ಮುಖಾಂತರ ಕೇಂದ್ರ ಸರ್ಕಾರದ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಶ್ಲಾಘನೀಯ, ಅನುದಾನ ಯಾವುದೇ ಸರ್ಕಾರದಾಗಿದ್ದರೂ ಅದನ್ನು ಮಂಜೂರು ಮಾಡಿಸುವಲ್ಲಿ ಸ್ಥಳಿಯ ಶಾಸಕರ ಪಾತ್ರ ಅಪಾರವಾಗಿದೆ, ಜನಪ್ರತಿನಿಧಿಗಳಿಗೆ ಅನುದಾನಗಳು ಕುಳಿತ ಸ್ಥಳಕ್ಕೆ ಬರುವುದಿಲ್ಲ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿ ಸಂಬಂಧಿಸಿದ ಇಲಾಖಾವಾರು ಮನವಿ ನೀಡಿ ಸರ್ಕಾರಕ್ಕೆ ಒತ್ತಡ ಹೇರಿದಾಗ ಮಾತ್ರ ಹೆಚ್ಚಿನ ಅನುದಾನ ದೊರೆಯಲು ಸಾಧ್ಯ ಈ ನಿಟ್ಟಿನಲ್ಲಿ ಶಾಸಕ ಕೆ.ಮಹದೇವ್ ಅವರ ಕಾರ್ಯ ಶ್ಲಾಘನೀಯ, ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಮಾಡುತ್ತೇವೆ ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಬೇರೆ ಪಕ್ಷದವರಾಗಿದ್ದರೂ ಒಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಪ್ರಧಾನಿ ನರೇಂದ್ರ ಮೋದಿಯವರು ಗ್ರಾ.ಪಂ ಗಳಿಗೆ ನೇರ ಅನುದಾನ ನೀಡಿದ್ದರಿಂದ ನಗರ ಪ್ರದೇಶಗಳಂತೆ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಶಾಸಕನಾಗಿ ಆಯ್ಕೆಯಾದಾಗಿನಿಂದ ಅಭಿವೃದ್ಧಿಯ ಬದ್ಧತೆ ಇಟ್ಟುಕೊಂಡು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತ ಮೂರೂವರೆ ವರ್ಷ ಕಳೆದರೂ ವಿರೋಧಿಗಳು ಹಿಂದಿನ ಶಾಸಕರ ಅನುದಾನ ಎಂದು ಸುಳ್ಳು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದ್ದು ವಿರೋಧಿಗಳ ಮಾತಿಗೆ ಕಿವಿಗೊಡಬಾರದು, ಗ್ರಾ.ಪಂ ಗಳ ಮೂಲಕ ಸರ್ವೋದಯ ಗ್ರಾಮದಡಿ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವುದರ ಜೊತೆಗೆ ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ರೈತರು ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ದೊರೆಯುವಂತೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಅತ್ತಿಗೋಡು ಗ್ರಾ.ಪಂ ವತಿಯಿಂದ ತಂದ್ರೆಗುಡಿ ಕೊಪ್ಪಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡ ನಾಗಪ್ಪನ ಕಟ್ಟೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ಬಾಗಿನ ಅರ್ಪಿಸಿದರು
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಹಾಯಕ ನಿರ್ದೇಶಕ ರಘುನಾಥ್, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ಅಧ್ಯಕ್ಷ ಎಂ.ಎಂ ರಾಜೇಗೌಡ, ಬಿಇಒ ವೈ.ಕೆ ತಿಮ್ಮೆಗೌಡ, ಜಿ.ಪಂ ಎಇಇ ಮಂಜುನಾಥ್, ಪಿಡಬ್ಲ್ಯುಡಿ ಎಇಇ ಜಯಂತ್, ಆರ್ ಡಬ್ಲ್ಯುಎಸ್ ಎಇಇ ಪ್ರಭು, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.