
ಪಿರಿಯಾಪಟ್ಟಣ: ಶಾಸಕನಾದ ನಂತರ ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ವಿವಿಧ ಪಕ್ಷ ಮುಖಂಡರು ಜೆಡಿಎಸ್ ಪಕ್ಷ ಸೇರುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ 1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಕಳೆದೆರಡು ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಾಣದೆ ಅಂದೆ ಜಯಗಳಿಸಿದ್ದರೆ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಈವರೆಗೆ ಯಾವುದೇ ಮೂಲಭೂತ ಸೌಕರ್ಯಗಳ ಸಮಸ್ಯೆ ಬಾರದ ಹಾಗೆ ನಿಗಾ ವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೆ, ವಿರೋಧಿಗಳ ಅಪಪ್ರಚಾರ ಹಾಗೂ ಪಟ್ಟಣದ ಯಾವುದೇ ವ್ಯಕ್ತಿ ಶಾಸಕನಾಗುವುದಿಲ್ಲ ಎಂಬ ಹಣೆಪಟ್ಟಿ ಕಳಚಿ ತಾಲ್ಲೂಕಿನ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದ ಬಳಿಕ ಸರ್ವ ಜನಾಂಗದ ಹಿತ ಕಾಪಾಡುವ ದೃಷ್ಟಿಯಲ್ಲಿ ಹಂತ ಹಂತವಾಗಿ ಸಮನಾಗಿ ಅನುದಾನ ನೀಡಿ ರಸ್ತೆ ಚರಂಡಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ್ದೇನೆ ಎಂದರು.
ಈ ವೇಳೆ ಚಿಕ್ಕ ವಡ್ಡರಕೇರಿ, ಕಿರನಲ್ಲಿ, ವಿ.ಜಿ ಕೊಪ್ಪಲು, ದೊಡ್ಡಬೆಲಾಳು, ಹಾಗೂ ದೊರೆಕೆರೆ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷ ಪ್ರೀತಿ ಅರಸ್, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ನಿರ್ದೇಶಕಿ ಸುನಿತಾ ಮಂಜುನಾಥ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಮುಖಂಡರಾದ ಶಿವಣ್ಣ, ಬಸವರಾಜ ಅರಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.