ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಪಿರಿಯಾಪಟ್ಟಣ: ಗ್ರಾಮೀಣ ಜನರ    ಸರ್ಕಾರಿ ಸಂಬಂಧಿತ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ನಿರ್ಲಕ್ಷತೆ ತೋರದೆ ಎಚ್ಚರಿಕೆ ವಹಿಸಿ ಶೀಘ್ರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಶಾಸಕ ಕೆ.ಮಹದೇವ್ ಹೇಳಿದರು.
 ತಾಲೂಕು ಆಡಳಿತ ವತಿಯಿಂದ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಗ್ರಾಮೀಣ ಜನರು ವಿದ್ಯಾವಂತರಾಗುವ ಕಡೆ ಹೆಚ್ಚಿನ ಗಮನ ಹರಿಸಿದರೆ ಸಮಸ್ಯೆಗಳು ಕ್ಷೀಣಿಸಲಿವೆ, ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಸರ್ಕಾರದ ಸವಲತ್ತುಗಳು ಯಾವುದೇ ರೀತಿಯಲ್ಲಿ ವಿಳಂಬವಾಗದಂತೆ ಫಲಾನುಭವಿಗಳಿಗೆ  ತಲುಪಿಸಲು ಅಧಿಕಾರಿಗಳು ನಿಗಾ ವಹಿಸಬೇಕು,  ಶಾಸಕನಾದ ನಂತರ ಸಾರ್ವಜನಿಕರ ಸೇವೆಗಾಗಿ ಶಕ್ತಿಮೀರಿ ದುಡಿದು ಪಾರದರ್ಶಕ ಆಡಳಿತದ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಶೀಘ್ರವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವೆ, ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಮನೆಗಳಿಗೆ ಹಾನಿ ಉಂಟಾದಾಗ ಸರ್ಕಾರದ ಬೆನ್ನು ಹತ್ತಿ  ಮರು ಮನೆಗಳ ನಿರ್ಮಾಣಕ್ಕಾಗಿ 1200 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ, ಈ ಹಿಂದೆ ತಾಲೂಕಿನಲ್ಲಿ ಶಾಸಕರಾಗಿ ಕರ್ತವ್ಯ ನಿರ್ವಹಿಸಿರುವಂತವರು ಸರ್ಕಾರದ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಗಳನ್ನು ನೀಡದೆ ಜನರಿಗೆ ವಂಚಿಸಿದ್ದಾರೆ  ಎಂದು ಆರೋಪಿಸಿದರು. ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ತಾಲೂಕಿನಲ್ಲಿ ಈವರೆಗೆ 11 ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸಿ ಹಲವು ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲಾಗಿದೆ, ಕಂದಾಯ ಇಲಾಖೆಯ ವತಿಯಿಂದ 1185 ಮಂದಿಗೆ ಪ್ರಕೃತಿ ವಿಕೋಪದ ಪರಿಹಾರ ವಿತರಿಸಲಾಗಿದೆ,  ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದ್ದು  ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲಾತಿಗಳು ಮನೆಯ ಬಾಗಿಲಲ್ಲಿ ದೊರಕಲಿವೆ ಎಂದರು.
ತಾ.ಪಂ ಇಓ ಸಿ.ಆರ್.ಕೃಷ್ಣಕುಮಾರ್ ಅವರು ಮಾತನಾಡಿ  ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳಲ್ಲಿ  ಸಾರ್ವಜನಿಕರಿಗೆ ವಿವಿಧ ಉಪಯುಕ್ತ ಯೋಜನೆಗಳಿದ್ದು ಸಾರ್ವಜನಿಕರು ಸೂಕ್ತ ಮಾಹಿತಿಯೊಂದಿಗೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಈ ವೇಳೆ ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಅವರು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಗಣರಾಜ್ಯವನ್ನಾಗಿ ಮಾಡುವ ಬಗ್ಗೆ ಪ್ರತಿಜ್ಞೆ ಬೋಧಿಸಿದರು, ವಿವಿಧ  ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಶಾಸಕ ಕೆ.ಮಹದೇವ್ ಮಂಜುರಾತಿ ಆದೇಶ ಪತ್ರ ವಿತರಿಸಿದರು, ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಶಾಸಕರು ಮತ್ತು ಅಧಿಕಾರಿಗಳನ್ನು ಗ್ರಾಮಸ್ಥರು ಪೂರ್ಣ ಕುಂಭ ಸ್ವಾಗತದೊಂದಿಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಬರಮಾಡಿಕೊಂಡರು.
 ಈ ಸಂದರ್ಭ ಮುತ್ತೂರು ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಅಭಿಲಾಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಜಲೇಂದ್ರ, ಜಿ.ಪಂ ಮಾಜಿ ಸದಸ್ಯ ಕೆ.ಸಿ ಜಯಕುಮಾರ್, ತಾಪಂ ಮಾಜಿ ಸದಸ್ಯ ಎ.ಟಿ ರಂಗಸ್ವಾಮಿ, ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ,  ಬಿಇಓ ಬಸವರಾಜು, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಚೆಸ್ಕಾಂ ಎಇಇ ಸುನಿಲ್, ಲೋಕೋಪಯೋಗಿ ಇಲಾಖೆಯ ಎಇಇ  ವೆಂಕಟೇಶ್, ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ,  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಸರ್ವೆ ಅಧಿಕಾರಿ ಎಂ.ಕೆ.ಪ್ರಕಾಶ್  ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಮುಖಂಡರು ಇದ್ದರು

Leave a Comment

Your email address will not be published. Required fields are marked *

error: Content is protected !!
Scroll to Top