
ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಒಕ್ಕೂಟ ದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಹೈನು ಉದ್ಯಮವನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ತಿಳಿಸಿದರು. ತಾಲೂಕಿನ ರಾಮನಾಥತುಂಗ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದರೆ, ಪಿರಿಯಾಪಟ್ಟಣ ತಾಲೂಕು ಮೈಸೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ. ನಾನು ಮೊದಲ ಬಾರಿಗೆ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ನಂತರದಲ್ಲಿ ತಾಲೂಕಿನಲ್ಲಿ 47 ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳು, 27 ಡಿಎಂಸಿ ಕೇಂದ್ರಗಳನ್ನು ಸ್ಥಾಪಿಸಿದ್ದರಿಂದ ನನ್ನನ್ನು ಪಕ್ಷಾತೀತವಾಗಿ ಬೆಂಬಲಿಸಿ ಎರಡನೇ ಬಾರಿಗೆ ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾನು ಅಧ್ಯಕ್ಷನಾದ ಒಂದು ವಾರದಲ್ಲಿ ಪ್ರತಿ ಲೀಟರ್ ಗೆ 2 ರೂ ಪ್ರೋತ್ಸಾಹಧನ ನೀಡುವ ಕೆಲಸ ಮಾಡಿದ್ದೇನೆ. ಒಕ್ಕೂಟದ ಯಾವುದೇ ಹಾಲು ಉತ್ಪಾದಕ ಮರಣಹೊಂದಿದ್ದಾರೆ ಒಂದು ಲಕ್ಷ ರೂ ಮರಣ ನಿಧಿ, ಅಪಘಾತಕ್ಕೆ ತುತ್ತಾದರೆ 2 ಲಕ್ಷ ರೂ. ಸಹಾಯಧನ, ರಾಸುಗಳಿಗೆ ಕಾಯಿಲೆ ಬಂದರೆ ಅವುಗಳ ಚಿಕಿತ್ಸೆಗಾಗಿ ಪ್ರತಿ ತಾಲೂಕಿಗೆ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಿರುವುದಾಗಿ ತಿಳಿಸಿದರು. ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ ಇದರಿಂದಲೇ ನಮ್ಮ ಹಳ್ಳಿಯ ಜನತೆ ಮಾಡಲು ಸಾಧ್ಯವಾಗಿದೆ, ಉತ್ಪಾದಕರು ಇನ್ನೂ ಹೆಚ್ಚಿನ ಲಾಭ ಪಡೆಯಬೇಕಾದರೆ ಗುಣಮಟ್ಟದ ಹಾಲನ್ನು ನೀಡಬೇಕಿದೆ ಎಂದು ಸಲಹೆ ನೀಡಿದರು.

ಮೈಮುಲ್ ನಿರ್ದೇಶಕ ರಾಜೇಂದ್ರ, ವಿಸ್ತರಣಾಧಿಕಾರಿ ನಿಶ್ಚಿತ, ತಾಲೂಕು ಪಂಚಾಯಿತಿ ಸದಸ್ಯ ಆರ್. ಎಸ್ ಮಹದೇವ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್. ಎ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಮುಖಂಡರಾದ ಮುತ್ತುರಾಜ್, ಆರ್ ಬಿ ಮಹೇಂದ್ರ, ಬೋರೇಗೌಡ ಶಿವಣ್ಣ ರಾಜೇಶ್ ರಮೇಶ್ ಕೆಂಪಣ್ಣ ಮಹದೇವನಾಯಕ ಮಾದೇಗೌಡ ರಾಮಸ್ವಾಮಿ ಸಂಘದ ನಿರ್ದೇಶಕರು ಸಂಘದ ಕಾರ್ಯದರ್ಶಿ ಗ್ರಾಮದ ಮುಖಂಡರು ಜನಪ್ರತಿನಿಧಿಗಳು ಹಾಜರಿದ್ದರು