ದೊಡ್ಡಬೇಲಾಳು ಗ್ರಾಮದಲ್ಲಿ ತಾಲೂಕಿನ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿ ಗಳಲ್ಲಿ ಮನರೇಗಾ ಯೋಜನೆ ಅಡಿಯಲ್ಲಿ 239.28 ಲಕ್ಷ ರೂ ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾಮಗಾರಿ, 10 ಲಕ್ಷ ರೂ ವೆಚ್ಚದಲ್ಲಿ ಅಡುಗೆ ಕೊಠಡಿ ಮತ್ತು ಶೌಚಾಲಯ ನಿರ್ಮಾಣದ ಕಾಮಗಾರಿ, ಕಂಪಲಾಪುರ ಗ್ರಾಮ ಪಂಚಾಯಿತಿ ಇಂದ ಬೋರೆಹೊಸಹಳ್ಳಿ ಗ್ರಾಮದಲ್ಲಿ 187.10 ಲಕ್ಷ ರೂ ವೆಚ್ಚದಲ್ಲಿ ಸರ್ವೋದಯ ಗ್ರಾಮ ಪರಿಕಲ್ಪನೆಯಡಿ ವಿವಿಧ ಯೋಜನೆಯ ಕಾಮಗಾರಿ, ಹಾಗು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯ 10 ಕೋಟಿ ವೆಚ್ಚದ ಮೊದಲ ಹಂತದ 100 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು ಪಟ್ಟಣ ಪ್ರದೇಶಗಳಲ್ಲಿ ದೊರಕುವ ಮೂಲಭೂತ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೂ ದೊರಕಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಯೋಜನೆ ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ವರ್ಗ ಕರ್ತವ್ಯ ನಿರ್ವಹಿಸಬೇಕು, ಮಹಾತ್ಮ ಗಾಂಧಿ ಅವರ ಕನಸು ಪರಿಪೂರ್ಣ ಜಾರಿಯಾಗಿದ್ದರೆ ರಾಮರಾಜ್ಯವಾಗುತ್ತಿತ್ತು ಆದರೆ ನರೇಗಾ ಯೋಜನೆ ಸದ್ಬಳಕೆಯಾಗದೆ ಕೆಲವರು ಹಣ ಲೂಟಿಗೆ ಮುಂದಾದ್ದರಿಂದ ಅಭಿವೃದ್ದಿ ಕುಂಠಿತವಾಯಿತು, ಸಾರ್ವಜನಿಕರ ತೆರಿಗೆ ಹಣ ಬಳಸುವವರು ಅಭಿವೃದ್ಧಿಗೆ ಒತ್ತು ನೀಡಬೇಕು ಇಲ್ಲವಾದಲ್ಲಿ ಜನರ ಶಾಪ ತಟ್ಟದೆ ಬಿಡದು, ಯಾವುದೇ ಜನಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡಿ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನಾಶೀರ್ವಾದ ಸಿಗುತ್ತದೆ, ನರೇಗಾ ಯೋಜನೆ ಮೂಲಕ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿದ್ದು ಇದಕ್ಕೆ ಮೂಲಪ್ರೇರಣೆ ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರು, ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನಕ್ಕೆ ಕಾಯದೆ ಗ್ರಾ.ಪಂ ಮೂಲಕ ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ ಜನಾನುರಾಗಿಯಾಗಿದ್ದಾರೆ, ತಾಲ್ಲೂಕಿನ ಪ್ರತಿ ಗ್ರಾ.ಪಂ ಗಳಲ್ಲಿ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ಸರ್ವೋದಯ ಪರಿಕಲ್ಪನೆಯಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಗರ ಪ್ರದೇಶಗಳಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಉಳಿದಿರುವ 27 ಗ್ರಾ.ಪಂ ನಗರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿ ಘನ ಹಾಗೂ ದ್ರವ ತ್ಯಾಜ್ಯ ವಿಂಗಡಿಸಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ, ಅ.2 ರ ಗಾಂಧಿ ಜಯಂತಿ ವೇಳೆಗೆ ಎಲ್ಲಾ ಗ್ರಾ.ಪಂ ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭ , ಬಿ.ಇ.ಓ ವ್ಯಕೆ ತಿಮ್ಮೇಗೌಡ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಘುನಾಥ್, ಕಂಪಲಾಪುರ ಗ್ರಾ.ಪಂ ಅಧ್ಯಕ್ಷೆ ರಾಣಿ ಕೃಷ್ಣೇಗೌಡ, ಸದಸ್ಯರಾದ ಸಣ್ಣತಮ್ಮಯ್ಯ, ಗೌರಮ್ಮ, ಕವಿತಾ, ಪ್ರತಿಭಾ, ನಾಗರಾಜ್, ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜಯಣ್ಣ, ಲಕ್ಷ್ಮಣ್, ಗ್ರಾ.ಪಂ ಮಾಜಿ ಅಧ್ಯಕ್ಷ ಭದ್ರೇಗೌಡ, ಪಿಡಿಒ ಎಸ್.ಆರ್ ಪರಮೇಶ್, ಕಾರ್ಯದರ್ಶಿ ಆರ್.ಪಿ ಸುಷ್ಮಾ ಮತ್ತು ಸಿಬ್ಬಂದಿ, ದೊಡ್ಡಬೇಲಾಳು ಗ್ರಾಪಂ ಅಧ್ಯಕ್ಷೆ ಆಸಿಯಾ ಖಾನಂ, ಉಪಾಧ್ಯಕ್ಷೆ ಗಾಯತ್ರಿ ಮತ್ತು ಸದಸ್ಯರು, ಪಿಡಿಒ ರವಿಕುಮಾರ್, ಮುಖಂಡರಾದ ಬಿ.ಎಂ ಚಂದ್ರಪ್ಪ, ಬಿ.ಸಿ ಶೇಖರ್, ಎಚ್.ಜೆ ಕುಮಾರ್, ಬಿ.ಟಿ ಸ್ವಾಮಿ, ಬಿ.ಜೆ ಮಾದೇಗೌಡ, ಬಿ.ಕೆ ತಮ್ಮಯ್ಯ, ಶಿವಣ್ಣ, ರಾಜೇಶ್ ಅರಸ್, ಕೃಷ್ಣ ಅರಸ್, ಪುಟ್ಟಸ್ವಾಮಿಗೌಡ ಹಾಗು ಮತ್ತಿತರಿದ್ದರು.