
ಪಿರಿಯಾಪಟ್ಟಣ: ಪಡಿತರ ತರಲು ದೂರದ ಊರುಗಳಿಗೆ ಓಡಾಡುವುದನ್ನು ತಪ್ಪಿಸಲು ತಾಲ್ಲೂಕಿನಾದ್ಯಂತ ಉಪಕೇಂದ್ರಗಳನ್ನು ತೆರೆದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನೂತನ ಪಡಿತರ ಉಪ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಮಹಿಳೆಯರು ಮಕ್ಕಳು ವಯೋವೃದ್ಧರು ಪಡಿತರಕ್ಕಾಗಿ ತಮ್ಮ ಊರುಗಳಿಂದ ಬೇರೆ ಊರುಗಳಿಗೆ ಹೋಗಿ ಸೂಕ್ತ ವಾಹನ ಸೌಲಭ್ಯ ಇಲ್ಲದೆ ಸಂಕಷ್ಟಕ್ಕೀಡಾಗಿರುವುದನ್ನು ಮನಗಂಡು ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ತಾಲ್ಲೂಕಿನಾದ್ಯಂತ ದೂರದ ಊರುಗಳಿಗೆ ತೆರಳುತ್ತಿರುವ ಸ್ಥಳಗಳಲ್ಲಿ ನೂತನವಾಗಿ ಉಪ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಿದ್ದರಿಂದ ಇಲಾಖೆ ನಿಯಮಾನುಸಾರ ಉಪಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ತಮ್ಮ ಊರುಗಳಲ್ಲಿಯೇ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಶಾಸಕನಾಗಿ ಆಯ್ಕೆಯಾದ ನಂತರ ತಾಲ್ಲೂಕಿನ ಯಾವುದೇ ಗ್ರಾಮದ ಸಾರ್ವಜನಿಕರು ನೀಡುವ ಸಮಸ್ಯೆಗಳ ಅರ್ಜಿಗಳನ್ನು ಪಕ್ಷಾತೀತವಾಗಿ ಬಗೆಹರಿಸಿ ನ್ಯಾಯ ದೊರಕಿಸಿಕೊಡಲಾಗುತ್ತಿದೆ ಎಂದರು.
ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಅವರು ಮಾತನಾಡಿ ನಮ್ಮ ಗ್ರಾಮದ ಅಭಿವೃದ್ಧಿಗೆ ಶಾಸಕರು ಹಲವು ಸವಲತ್ತುಗಳನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ಉಳಿಕೆ ಮನವಿಗಳ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಕೋರಿದರು.
ಈ ಸಂದರ್ಭ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕ ಮಂಜುನಾಥ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ರೈತ ಸಂಘ ತಾಲ್ಲೂಕು ಅಧ್ಯಕ್ಷ ಶಿವಣ್ಣಶೆಟ್ಟಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಜಲೇಂದ್ರ, ಮುಖಂಡರಾದ ಗಗನ್, ದಿನೇಶ್, ಅಶೋಕ್, ಅಣ್ಣೆಗೌಡ್ರು, ಗಣೇಶ್, ರಾಜು ಹಾಗು ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.