
ಪಿರಿಯಾಪಟ್ಟಣ: ರೈತರ ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘಗಳ ಮೂಲಕ ಹಲವು ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಎಂಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಅಪೇಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ ಹರೀಶ್ ಗೌಡ ಹೇಳಿದರು. ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅತಿಹೆಚ್ಚು ರೈತರ ಸಾಲ ಮನ್ನ ಮಾಡಿ ರೈತಪರ ಹಲವು ಯೋಜನೆಗಳನ್ನು ಜಾರಿಗೆ ತರಲಾಯಿತು, ಸಹಕಾರ ಕ್ಷೇತ್ರದಲ್ಲಿ ಅದರಲ್ಲಿಯೂ ಪಿರಿಯಾಪಟ್ಟಣದಲ್ಲಿ 77 ಕೋಟಿ ರೂಗಳ ರೈತರ ಸಾಲ ಮನ್ನಾವಾಗಿದೆ, ಸಾಲ ಪಡೆಯುವುದು ಹಾಗೂ ನಿಗದಿತ ಸಮಯದಲ್ಲಿ ಹಿಂತಿರುಗಿಸುವುದರಲ್ಲಿ ಪಿರಿಯಾಪಟ್ಟಣ ಮೊದಲ ಸ್ಥಾನದಲ್ಲಿದೆ, ಸಹಕಾರ ಸಂಘಗಳಲ್ಲಿನ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗುವಂತೆ ತಿಳಿಸಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲೂಕಿನಲ್ಲಿ ರೈತರಿಗೆ ಕೃಷಿ ಬ್ಯಾಂಕ್ ತೆರೆದು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಕೆಲಸವಾಗಬೇಕು, ಈ ಬಗ್ಗೆ ಜಿ.ಟಿ.ದೇವೇಗೌಡರವರಿಗೂ ಮನವಿ ಮಾಡಲಾಗಿದೆ, ತಾಲೂಕಿನಲ್ಲಿ ಅಪ್ಪಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಸೋಲಿನ ಭೀತಿಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಮುಂದಾಗಿದ್ದಾರೆ 35 ವರ್ಷ ಅಧಿಕಾರ ನಡೆಸಿ ವಿಲಾಸಿ ಜೀವನ ನಡೆಸಿ ಅವರು ಗ್ರಾಮೀಣಾಭಿವೃದ್ದಿಯನ್ನು ಸಂಪೂರ್ಣ ಕಡೆಗಣಿಸಿದ್ದರು ಎಂದರು.
ಈ ಸಂದರ್ಭ ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಪಂಚವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ರಾಜು, ಉಪಾಧ್ಯಕ್ಷೆ ಮಂಗಳಮ್ಮ ಮತ್ತು ನಿರ್ದೇಶಕರು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮೈಮೂಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಕೆ ಹರೀಶ್, ಗ್ರಾ.ಪಂ.ಅಧ್ಯಕ್ಷ ಗೋವಿಂದರಾಜು, ಸಹಕಾರ ಅಭಿವೃದ್ದಿ ಅಧಿಕಾರಿ ಪ್ರಸಾದ್, ಸಿಇಓ ಗಿರೀಶ್, ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಗ್ರಾಮಸ್ಥರು ಇದ್ದರು.